ಸುರಾಲು ಅರಮನೆಯ ಶ್ರೀ ಪಾರ್ಶ್ವನಾಥ ಸ್ವಾಮಿ, ಅಮ್ಮನವರ ಬಸದಿಯು ಕರ್ನಾಟಕದ ಪುರಾತನ ಬಸದಿಗಳಲ್ಲಿ ಒಂದು. == ಸ್ಥಳ == ಉಡುಪಿ ತಾಲೂಕು ಕೊಕ್ಕರ್ಣೆ ಗ್ರಾಮದ ಸುರಾಲು ಅರಮನೆಯಲ್ಲಿ ಅಮ್ಮನವರ ಬಸದಿ ಇದೆ. ಅಲ್ಲಿಂದ ನಾಲ್ಕು ಕಿ.ಮೀ ದೂರದಲ್ಲಿ ಕೊಕ್ಕರ್ಣೆ ಅರಮನೆಯ ಶ್ರೀ ಪಾಶ್ವನಾಥಸ್ವಾಮಿ ಬಸದಿ ಇದೆ. ಸುರಾಲು ಅರಮನೆಯ ಈ ಬಸದಿಯು ಹೊಂಬುಚ್ಚು ಶ್ರೀಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಡುತ್ತದೆ. == ಪ್ರಾಂಗಣ == ಇದು ಭಾಗಶಃ ಶಿಲೆ ಮತ್ತು ಹಂಚಿನ ಮಾಡನ್ನು ಹೊಂದಿದೆ. ಈ ಬಸದಿಗೆ ಮೇಗಿನ ನೆಲೆ ಇಲ್ಲ. ಬಸದಿಯ ಪರಿಸರದಲ್ಲಿ ಪಾರಿಜಾತ ಹೂವಿನ ಗಿಡದಂತೆ ಇನ್ನೂ ಕೆಲವು ಜಾತಿಯ ಹೂವಿನ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. == ದೈವ == ಈ ಬಸದಿಯಲ್ಲಿ ಪಾಶ್ವನಾಥಸ್ವಾಮಿಯಂತೆ ಪದ್ಮಾವತೀ ಅಮ್ಮನವರನ್ನೂ ಪೂಜಿಸಲಾಗುತ್ತದೆ. ವಿಶೇಷ ಕಾರ್ಯಗಳನ್ನು ಅರಮನೆಯವರು ಪ್ರಾರಂಭಿಸುವಾಗ ಮೊದಲಿಗೆ ಅಮ್ಮನವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ನಡೆದುಕೊಂಡು ಬಂದ ಪದ್ಧತಿ. ಆದುದರಿಂದ ಇಲ್ಲಿ ಹಲವಾರು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಮೂಲನಾಯಕ ಶ್ರೀ ಪಾಶ್ರ್ವನಾಥಸ್ವಾಮಿಯ ಬಿಂಬವು ಪಂಚಲೋಹದ್ದಾಗಿದೆ ಹಾಗೂ ಸುತ್ತಲೂ ಮಕರ ತೋರಣದ ಪ್ರಭಾವಳಿಯ ಅಲಂಕಾರವಿದೆ. ದಿನಕ್ಕೆ ಒಂದು ಬಾರಿ ವ್ಯವಸ್ಥಿತವಾಗಿ ಪೂಜೆಯನ್ನು ನಡೆಸಲಾಗುತ್ತದೆ. ಅರಮನೆಯು ಪುನರ್ ನಿರ್ಮಾಣವಾಗುವ ಸಂದರ್ಭದಲ್ಲಿ ಈ ಬಸದಿಯನ್ನು ವ್ಯವಸ್ಥಿತವಾಗಿ ಪುನರ್ ನಿರ್ಮಿಸಿ ಪೂಜಾದಿಗಳನ್ನು ಇಟ್ಟುಕೊಳ್ಳಲಾಗಿದೆ. ಇವೆಲ್ಲವೂ ಸಾಂಗವಾಗಿ ನಡೆಯಬೇಕೆಂದು ಅರಮನೆಯ ಸದಸ್ಯರು ಆಶಿಸುತ್ತಾರೆ. == ಉಲ್ಲೇಖಗಳು ==